ಹೊನ್ನಾಳಿ
	ಭಾರತದ ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಪೂರ್ವದಲ್ಲಿ ಚನ್ನಗಿರಿ, ದಕ್ಷಿಣದಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ, ಪಶ್ಚಿಮದಲ್ಲಿ ಶಿಕಾರಿಪುರ ಮತ್ತು ಹಾವೇರಿ ಜಿಲ್ಲೆಯ ಹಿರೇಕೆರೂರು, ಉತ್ತರದಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ಮತ್ತು ದಾವಣಗೆರೆ ತಾಲ್ಲೂಕುಗಳು ಸುತ್ತುವರಿದಿವೆ. ಗೋವಿನಕೋವಿ, ಸಾಸವೆಹಳ್ಳಿ, ಹೊನ್ನಾಳಿ ಮತ್ತು ಬೆಳಗುತ್ತಿ ಹೋಬಳಿಗಳು. ಗೋವಿನಕೋವಿ ಮತ್ತು ಸಾಸವೆಹಳ್ಳಿ ಹೋಬಳಿಗಳನ್ನು ಪ್ರಥಮ ಮತ್ತು ದ್ವಿತೀಯ ಭಾಗಗಳಾಗಿ ವಿಂಗಡಿಸಿದೆ. ಈ ತಾಲ್ಲೂಕಿನಲ್ಲಿ ಎರಡು ಪಟ್ಟಣಗಳೂ 166 ಗ್ರಾಮಗಳೂ ಇವೆ. ತಾಲ್ಲೂಕಿನ ವಿಸ್ತೀರ್ಣ 856.7 ಚ.ಕಿಮೀ. ಜನಸಂಖ್ಯೆ 2,22,490.

	ಈ ತಾಲ್ಲೂಕು ಜಿಲ್ಲೆಯ ಬಯಲು ಪ್ರದೇಶಕ್ಕೆ ಸೇರಿದ್ದರೂ ಸಣ್ಣಪುಟ್ಟ ಗುಡ್ಡಗಳನ್ನು ಈ ತಾಲ್ಲೂಕಿನಲ್ಲಿ ಕಾಣಬಹುದು. ತಾಲ್ಲೂಕಿನಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹಬ್ಬಿರುವ ಬೆಟ್ಟಶ್ರೇಣಿಯಲ್ಲಿರುವ ಕಲ್ವರಂಗನ ಗಿರಿ 1,031 ಮೀ ಎತ್ತರವಿದ್ದು ದಾವಣಗೆರೆ ಜಿಲ್ಲೆಯ ಒಳಭಾಗದ ಎತ್ತರದ ಶಿಖರವೆನಿಸಿದೆ. ತುಂಗಭದ್ರಾ ತಾಲ್ಲೂಕಿನ ಮುಖ್ಯನದಿ. ತಾಲ್ಲೂಕಿನ ದಕ್ಷಿಣದಲ್ಲಿ ಮಳಲಿ ಗ್ರಾಮದ ಪೂರ್ವದಲ್ಲಿ ತಾಲ್ಲೂಕನ್ನು ಪ್ರವೇಶಿಸಿಸುವುದು. ಸ್ವಲ್ಪ ದೂರ ವಾಯವ್ಯಾಭಿಮುಖವಾಗಿ ಹರಿದು ಅನಂತರ ಆಗ್ನೇಯಾಭಿಮುಖವಾಗಿ ಮುಂದೆ ಪಶ್ಚಿಮಾಭಿಮುಖವಾಗಿ ಹರಿಯುವುದು. ಅನಂತರ ಉತ್ತರಾಭಿಮುಖವಾಗಿ ಹರಿದು ಸ್ವಲ್ಪ ದೂರ ಪೂರ್ವಕ್ಕೆ ತಿರುಗಿ ಮುಂದೆ ಹೊನ್ನಾಳಿ ಕಡೆಗೆ ಅದನ್ನು ದಾಟಿಕೊಂಡು ಮುಂದೆ ಉತ್ತರಾಭಿಮುಖವಾಗಿ ಹರಿಯವುದು. ನದಿ ಉತ್ತರದಲ್ಲಿ ಸ್ವಲ್ಪದೂರ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕನ್ನು ವಿಂಗಡಿಸಿ ಹೊನ್ನಾಳಿ ತಾಲ್ಲೂಕಿನ ಗಡಿಯಾಗಿ ಹರಿಯುವುದು. ತಾಲ್ಲೂಕಿನಲ್ಲಿ ಈ ನದಿಯ ಎಡಬಲದಲ್ಲಿ ಇದನ್ನೇ ಕೂಡಿಕೊಳ್ಳುವ ಅನೇಕ ಸಣ್ಣ ತೊರೆಗಳುಂಟು.

	ಈ ತಾಲ್ಲೂಕಿನಲ್ಲಿ ಬಳಪದ ಕಲ್ಲು, ಸುಣ್ಣಕಲ್ಲು ದೊರೆಯುವುದು. ಇಲ್ಲಿ ದೊರೆಯುವ ಬೆಣಚುಕಲ್ಲಿಗೆ ಹೊನ್ನಾಳಿ ಬೆಣಚುಕಲ್ಲೆಂದೇ ಹೆಸರು. ತಾಲ್ಲೂಕಿನಲ್ಲಿ ಜೇಡಿ, ಮರಳುಮಿಶ್ರಿತ ಜೇಡಿ, ಮರಳುಮಿಶ್ರಿತ ಕೆಂಪುಮಣ್ಣು ಮತ್ತು ಹತ್ತಿ ಬೆಳೆಗೆ ಅನುಕೂಲವಾದ ಮಧ್ಯಮ ಕಪ್ಪಿನ ಮಣ್ಣು ಪ್ರದೇಶಗಳಿವೆ. ಹುಲ್ಲುಗಾವಲುಗಳಿಂದಲೂ ಕುರುಚಲು ಕಾಡುಗಳಿಂದಲೂ ಕೂಡಿರುವ ಈ ತಾಲ್ಲೂಕಿನ ಹವೆ ಸಹ್ಯವಾದದ್ದು. ವಾರ್ಷಿಕ ಸರಾಸರಿ ಮಳೆ 714.84 ಮಿಮೀ.

	ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಅನುಕೂಲವಾಗಿ ಕೆರೆಗಳೂ ಬಾವಿಗಳೂ ಇವೆ. ನಾಲಾನೀರಿನಿಂದ ಈ ತಾಲ್ಲೂಕಿನ ನೀರಾವರಿಯಾಗಿದೆ. ತಾಲ್ಲೂಕಿನಲ್ಲಿ 9,388 ಹೆಕ್ಟೇರ್ ಅರಣ್ಯಪ್ರದೇಶವೂ 11,186 ಹೆಕ್ಟೇರ್ ಖಾಯಂ ಹುಲ್ಲುಗಾವಲು ಪ್ರದೇಶವೂ ಇದೆ. ಬತ್ತ, ಕಬ್ಬು, ನೆಲಗಡಲೆ, ಜೋಳ, ಹತ್ತಿ ಇಲ್ಲಿಯ ಪ್ರಧಾನಬೆಳೆಗಳು. ಇವುಗಳ ಜೊತೆಗೆ ದ್ವಿದಳ ಧಾನ್ಯಗಳು, ಹೊಗೆಸೂಪ್ಪು, ತೆಂಗು, ವಿವಿಧ ತರಕಾರಿ ಮತ್ತು ಫಲಗಳನ್ನೂ ಬೆಳೆಯಲಾಗುತ್ತದೆ. ಪಶುಪಾಲನೆಯಿದ್ದು ಪಶುವೈದ್ಯಾಲಯಗಳಿವೆ. ಮತ್ಸ್ಯೋದ್ಯಮವಿದೆ.

	ಈ ತಾಲ್ಲೂಕಿನಲ್ಲಿ ಚಿನ್ನ ಸ್ವಲ್ಪಮಟ್ಟಿಗೆ ಸಿಗುವುದು. ಹೊನ್ನಾಳಿಯ ಚಿನ್ನದಗಣಿ ಪ್ರದೇಶ ಕುದುರೆಕೊಂಡು-ಪಲವನಹಳ್ಳಿಗಳನ್ನೊಳಗೊಂಡಿದೆ. ಈ ಪ್ರದೇಶದಲ್ಲಿ ಚಿನ್ನ ತೆಗೆಯುವ ಕೆಲಸ ನಡೆದು ಲಾಭದಾಯಕವಲ್ಲ ವೆಂದು ಕೈಬಿಡಲಾಗಿದೆ. ಹೊನ್ನಾಳಿಯಲ್ಲಿ ಅಕ್ಕಿ ಮತ್ತು ಎಣ್ಣೆ ಗಿರಣಿಗಳಿವೆ. ಕೈಮಗ್ಗದ ಹತ್ತಿ ಬಟ್ಟೆ ಇಲ್ಲಿ ತಯಾರಾಗುತ್ತದೆ. ಈ ತಾಲ್ಲೂಕು ಒಂದರಲ್ಲೇ 483 ಕೈಮಗ್ಗದ ಘಟಕಗಳಿದ್ದವು. ಸುಣ್ಣ ತಯಾರಿಕೆಯುಂಟು. ಬೊಂಬು ಕೈಗಾರಿಕೆ, ಮರಗೆಲಸ, ಚಾಪೆ ತಯಾರಿಕೆಗೂ ಈ ತಾಲ್ಲೂಕು ಪ್ರಸಿದ್ಧ. ಕೃಷಿ ಉಪಕರಣಗಳ, ಚರ್ಮವಸ್ತುಗಳ ತಯಾರಿಕೆಯುಂಟು. ಮಣ್ಣಿನ ವಸ್ತುಗಳ ತಯಾರಿಕೆಯಲ್ಲೂ ಮುಂದಾಗಿದೆ.

	ಹೊನ್ನಾಳಿಯ ಉತ್ತರಕ್ಕೆ 5 ಕಿಮೀ ದೂರದಲ್ಲಿರುವ ಬಳ್ಳೇಶ್ವರ ತುಂಗಭದ್ರಾನದಿಯ ಎಡದಂಡೆಯ ಮೇಲಿದೆ. ಈ ಗ್ರಾಮದ ಬಳ್ಳಲಿಂಗೇಶ್ವರ ಎಂಬ ಈಶ್ವರ ದೇವಾಲಯ ಹೊಯ್ಸಳ ಶೈಲಿಯದು. ಇಲ್ಲಿ ಪಾಶ್ರ್ವನಾಥ ಜೈನ ಬಸದಿಯೊಂದಿದೆ. ಹೊನ್ನಾಳಿಯ ನೈಋತ್ಯಕ್ಕೆ 23 ಕಿಮೀ ದೂರದಲ್ಲಿರುವ ಬೆಳಗುತ್ತಿ ಹೋಬಳಿ ಕೇಂದ್ರ. ಇಲ್ಲಿ ಸಿದ್ಧೇಶ್ವರ, ಚನ್ನಕೇಶವ ದೇವಾಲಯಗಳಿವೆ. ಹೊನ್ನಾಳಿಗೆ ಒಂದು ಕಿಮೀ ದೂರದಲ್ಲಿರುವ ಹಿರೇಮಠ ಗ್ರಾಮ ನ್ಯಾಮತಿ ಮತ್ತು ಶಿಕಾರಿಪುರ ರಸ್ತೆಯಲ್ಲಿದೆ. ಇಲ್ಲಿ ಪ್ರಸಿದ್ಧ ಚನ್ನಪ್ಪಸ್ವಾಮಿ ಮಠವಿದೆ. ಹೊನ್ನಾಳಿಯ ಆಗ್ನೇಯಕ್ಕೆ 6 ಕಿಮೀ ದೂರದಲ್ಲಿರುವ ಕಮ್ಮಾರಗಟ್ಟೆ ಗ್ರಾಮ ತುಂಗಭದ್ರಾ ನದಿಯ ಬಲದಂಡೆಯ ಮೇಲಿದೆ. ಪರಶುರಾಮ ದಿಗ್ವಿಜಯದ ಅನಂತರ ತನ್ನ ರಕ್ತಸಿಕ್ತ ಕೊಡಲಿಯನ್ನು ಇಲ್ಲಿ ತೊಳೆದನೆಂದೂ ಈ ಊರಿಗೆ ಕರ್ಮಹಾರ ಕ್ಷೇತ್ರವೆಂದು ಹೆಸರಿತ್ತೆಂದೂ ಹೇಳುವರು. ಹೆಳವನಕಟ್ಟೆ ಗಿರಿಯಮ್ಮ ತನ್ನ ಕೊನೆಗಾಲವನ್ನು ಇಲ್ಲಿ ಕಳೆದಳೆಂದು ಹೇಳುವರು. ಆಕೆ ಸತ್ತ ಬಂಡಹೊಳೆ ಎಂಬಲ್ಲಿ ಪ್ರತಿವರ್ಷ ಕಾರ್ತಿಕೋತ್ಸವ ಜರಗುತ್ತದೆ. ಈ ನದಿಯ ದಂಡೆ ಮೇಲಿರುವ ಆಂಜನೇಯ ದೇವಾಲಯ ಬಹಳ ಪ್ರಸಿದ್ಧ. ಹೊನ್ನಾಳಿಯ ನೈಋತ್ಯದಲ್ಲಿ ಸುಮಾರು 22 ಕಿಮೀ ದೂರದಲ್ಲಿರುವ ಕುದುರೆಕೊಂಡ ನ್ಯಾಮತಿಯ ನೈಋತ್ಯದಲ್ಲಿ ಸು. 6 ಕಿಮೀ ದೂರದಲ್ಲಿದೆ. ಕುದುರೆಕೊಂಡ ಬೆಟ್ಟದ ತಪ್ಪಲಲ್ಲಿರುವ ಈ ಗ್ರಾಮದ ಬಳಿ ಹಿಂದೆ ಚಿನ್ನ ತೆಗೆಯುವ ಪ್ರಯತ್ನ ನಡೆದಿತ್ತು. ಹೊನ್ನಾಳಿಯ ಆಗ್ನೇಯಕ್ಕೆ 10 ಕಿಮೀ ದೂರದಲ್ಲಿರುವ ಕುರುವ ಗ್ರಾಮ ತುಂಗಭದ್ರಾ ನದಿಯ ಎಡದಂಡೆಯ ಮೇಲಿದೆ. ಈ ಗ್ರಾಮದ ಬಳಿ ಇರುವ ಕುರುವದ ಗಡ್ಡೆ ದ್ವೀಪ ತುಂಗಭದ್ರಾ ನದಿಯಿಂದ ಸುತ್ತುವರಿದಿದೆ. ಈ ದ್ವೀಪದಲ್ಲಿ ರಾಮೇಶ್ವರ ದೇವಾಲಯವಿದೆ. ಈ ದೇವಾಲಯದ ದಕ್ಷಿಣ ದ್ವಾರದ ಎದುರು ಒಂದು ದೊಡ್ಡ ಕಲ್ಲಿನ ದೀಪಸ್ತಂಭವಿದೆ. ಚಾಳುಕ್ಯರ ಕಾಲದ ಈ ದೇವಾಲಯದಲ್ಲಿ ಚಾಳುಕ್ಯರ, ಹೊಯ್ಸಳ, ಸೇವುಣ, ವಿಜಯನಗರದ ದೊರೆಗಳ ಶಾಸನಗಳಿವೆ. ಹೊನ್ನಾಳಿಗೆ ಪಶ್ಚಿಮದಲ್ಲಿ 3 ಕಿಮೀ ದೂರದಲ್ಲಿರುವ ಮಾಕೊಪ್ಪ ಗ್ರಾಮದಲ್ಲಿ ಹಳದಮ್ಮನ ದೇವಾಲಯವಿದೆ. ಹೊನ್ನಾಳಿಯ ನೈಋತ್ಯಕ್ಕೆ 13 ಕಿಮೀ ದೂರದಲ್ಲಿರುವ ನ್ಯಾಮತಿ ಒಂದು ಪಟ್ಟಣ ಮತ್ತು ವ್ಯಾಪಾರ ಕೇಂದ್ರ.

	ಹೊನ್ನಾಳಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಶಿವಮೊಗ್ಗದ ಈಶಾನ್ಯದಲ್ಲಿ 39 ಕಿಮೀ ದೂರದಲ್ಲಿ ತುಂಗಭದ್ರಾ ನದಿಯ ಎಡದಂಡೆಯ ಮೇಲಿದೆ. ಜನಸಂಖ್ಯೆ 15,574.

	ಭಾಸ್ಕರಕ್ಷೇತ್ರವೆಂದು ಪುರಾಣಪ್ರಸಿದ್ಧವಾದ ಈ ಪಟ್ಟಣಕ್ಕೆ ಬಿದಿರಿ ಎಂದೂ ಹೊನ್ನಹಳ್ಳಿಯೆಂದೂ ಹೆಸರಿತ್ತೆಂದು ತಿಳಿದುಬರುವುದು. ಇಂದು ಇದು ಸುತ್ತಲ ಗ್ರಾಮಗಳ ವ್ಯಾಪಾರ ಕೇಂದ್ರ. ರಾಣಿ ಹೊಯ್ಸಳದೇವಿ ಮಲ್ಲಿಕಾರ್ಜುನನಿಗೆ ಇಲ್ಲೊಂದು ಶಿಲಾದೇಗುಲ ಕಟ್ಟಿ ಅದನ್ನು ಮಲ್ಲಿಕೇಶ್ವರ ತೀರ್ಥ ಎಂದು ಕರೆದಿದ್ದಳೆಂದು ಶಿಲಾಶಾಸನದಿಂದ ತಿಳಿದುಬರುತ್ತದೆ. ತುಂಗಭದ್ರಾ ನದಿಯ ಸೇತುವೆ ಬಳಿ ಸಂತ ಶ್ರೀನಿವಾಸ ತೀರ್ಥರ ಸಮಾಧಿಯಿದೆ. ರಾಘವೇಂದ್ರ ಸ್ವಾಮಿಗಳ ಬೃಂದಾವನವಿದೆ. ತುಂಗಭದ್ರಾನದಿಯ ಎಡದಂಡೆ ಹತ್ತಿರವಿರುವ ಹಳೆಯಪಟ್ಟಣದಲ್ಲಿ ಸುತ್ತಲೂ ಕಂದಕವಿರುವ ಹಳೆಕೋಟೆಯಿದೆ.
				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

		*